ಉದಯಶಂಕರ

20ನೆಯ ಶತಮಾನದ ನಾಲ್ಕನೆಯ ದಶಕದಲ್ಲಿ ಭಾರತದಲ್ಲಾದ ನೃತ್ಯ ಕಲೆಯ ಪುನರುತ್ಥಾನಕ್ಕೆ ಕಾರಣಕರ್ತರೆನಿಸಿದ ಪ್ರಮುಖರಲ್ಲಿ ನೃತ್ಯಪಟು ಉದಯಶಂಕರ್ ಒಬ್ಬರು. ಹುಟ್ಟಿದ್ದು ಉದಯಪುರದಲ್ಲಿ (1902). ತಂದೆ ರಾಜಸ್ಥಾನದಲ್ಲಿ ಶಿಕ್ಷಣಾಧಿಕಾರಿ. ವಾರಾಣಾಸಿ ಮತ್ತು ಮುಂಬಯಿ ಆಟ್ರ್ಸ್ ಕಾಲೇಜುಗಳಲ್ಲಿ ಉದಯಶಂಕರ ಶಿಕ್ಷಣ ಬಾಲ್ಯದಿಂದಲೇ ಈತನಿಗೆ ಚಿತ್ರಕಲೆಯಲ್ಲಿ ಅಮಿತವಾದ ಆಸಕ್ತಿ, ನೃತ್ಯಕಲೆಯಲ್ಲೂ ಅಭಿರುಚಿ.
	
ಅದು ನೃತ್ಯಕಲೆಗೆ ಕಳಂಕವಿದ್ದ ಕಾಲ. ಹೀನವೃತ್ತಿ, ಅಸಹ್ಯಕಲೆ-ಎನಿಸಿಕೊಂಡಿದ್ದ ಈ ಕಲೆ ಉದಯಶಂಕರ ಅವಿರತ ಪ್ರಯತ್ನ ಮತ್ತು ದುಡಿಮೆಗಳಿಂದ ಶ್ರೇಷ್ಠ ಕಲೆಯೆಂದು ಮಾನ್ಯತೆ ಪಡೆಯಿತು. ಉದಯಶಂಕರ ನೃತ್ಯಗಳಿಗೆ ಸ್ವದೇಶದಲ್ಲಿ ಅಲಭ್ಯವಾದ ಮನ್ನಣೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದೊರೆಯಿತು. ರಷ್ಯದ ಶ್ರೇಷ್ಠ ನರ್ತಕಿ ಎನ್ನ ಪಾವ್ಲೋವ ಜೊತೆಯಲ್ಲಿ ರಾಧಾಕೃಷ್ಣ ನೃತ್ಯವನ್ನು ರಚಿಸಿ, ಯೂರೋಪಿನಲ್ಲಿ ಪ್ರದರ್ಶಿಸಿದಾ ಜನಮೆಚ್ಚಿದರು. ಅಪಾರ ಖ್ಯಾತಿ ದೊರೆಯಿತು. ಹಿಂದೂ ದೇಶದ ನೃತ್ಯಕಲೆಯಲ್ಲಿನ ಆಧ್ಯಾತ್ಮಿಕತೆ ಸೌಂದರ್ಯವನ್ನು ಪ್ರಚಾರಮಾಡುವ ಅವರ ಪ್ರಯತ್ನಕ್ಕೆ ಅಪೂರ್ವ ಯಶಸ್ಸು ಭಾರತೀಯ ಪುರಾಣಗಳಿಂದ ಅನೇಕ ಘಟನೆಗಳನ್ನು ಆಯ್ದು ಅವನ್ನು ತನ್ನ ನೃತ್ಯ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡರು. ಈ ಕಾರ್ಯಕ್ರಮಗಳೆಲ್ಲಾ ಪಾಶ್ಚಾತ್ಯರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಭಾರತಕ್ಕೆ ಅಪೂರ್ವ ಕೀರ್ತಿ ತಂದುವು.
	
ಪಾಶ್ಚಾತ್ಯರಾಷ್ಟ್ರಗಳಲ್ಲಿ ಯಶಸ್ವಿ ಪ್ರವಾಸದಿಂದ ಮರಳಿದಾಗ (1938) ಗುರುದೇವ ರವೀಂದ್ರನಾಥ ಠಾಕೂರರು ಉದಯಶಂಕರನನ್ನು ಕುರಿತು ಪ್ರೋತ್ಸಾಹ ನೀಡಿದರು. ಹೊಸ ನೃತ್ಯ ರೂಪಕಗಳನ್ನು ಹುರಿದುಂಬಿಸಿದರು. ಕಥಕ್ಕಳಿ ಮಣಿಪುರಿ ನೃತ್ಯಸಂಪ್ರದಾಯಗಳನ್ನು ಚೆನ್ನಾಗಿ ಅಭ್ಯಸಿಸಿ, ಅವುಗಳಿಂದ ಹೆಜ್ಜೆವಿನ್ಯಾಸ ಮತ್ತು ಮುದ್ರೆಗಳನ್ನು ಆಯ್ದು ತನ್ನದೇ ಆದ ಹಲವಾರು ಹೃದಯಂಗಮ ನೃತ್ಯಗಳನ್ನು ವಿನ್ಯಾಸ ಮಾಡಿದರು. ಅವುಗಳಲ್ಲಿ ಕಾರ್ತಿಕೇಯ, ಶಿವತಾಂಡವ, ಶಿವಪಾರ್ವತಿ ನೃತ್ಯ ದ್ವಂದ್ವ, ಇಂದ್ರ-ಇವು ಪ್ರಮುಖವಾದುವು. ಶಿವನಾಗಿ ರಂಗಸ್ಥಳ ಪ್ರವೇಶಿಸಿದಾಗ ಪ್ರೇಕ್ಷಕರೆಲ್ಲ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾಗಿದ್ದಾನೆಂದು ಹೊಗಳುತ್ತಿದ್ದರು. ಇಂಥ ದೈವಿಕ ಶಕ್ತಿ ಇವರಲ್ಲಿತ್ತು. ಹಾವಾಡಿಗನ ನೃತ್ಯ, ಸುಗ್ಗಿ ಕುಣಿತ, ಜಾನಪದ ನೃತ್ಯ ಮುಂತಾದ ಹಲವಾರು ವಿಧವಿಧದ ನೃತ್ಯಗಳನ್ನು ರಚಿಸಿ ಅವನ್ನು ಪ್ರದರ್ಶಿಸಿ ಭಾರತದ ನೃತ್ಯಕಲೆಯನ್ನು ಜನಪ್ರಿಯಗೊಳಿಸಿದರು. ಜೊತೆಗೆ ಜೀವನ ತರಂಗ, ದುಡಿಮೆ ಮತ್ತು ಯಂತ್ರಗಳು, ಪ್ರಮೀಳಾರ್ಜುನ, ಶಾಶ್ವತರಾಗ ಮುಂತಾದ ನೃತ್ಯನಾಟಕಗಳು ರೂಪುಗೊಂಡು, ಇವೆಲ್ಲ ಜಗತ್ತಿನ ಪ್ರಮುಖ ಕಲಾವಿದರು, ಕಲಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. ನೃತ್ಯಕಲೆಯ ಪ್ರಸಾರಕ್ಕೆ ಕಲಾಶಾಲೆಯ ಆವಶ್ಯಕತೆ ಎಷ್ಟೆಂಬುದನ್ನು ಮನಗಂಡು ಆಲ್ಮೋರದಲ್ಲಿ ಒಂದು ಕಲಾಶಾಲೆ ಸ್ಥಾಪಿಸಿದ. ಈ ಶಾಲೆಯಲ್ಲಿ ಕಥಕ್ಕಳಿಪಂಡಿತ ಶಂಕರನ್‍ನಂಥ ಶ್ರೇಷ್ಠ ನೃತ್ಯ ಶಿಕ್ಷಕರಿದ್ದರು. ಕಾರಣಾಂತರದಿಂದ ಈ ಶಾಲೆ ಮುಚ್ಚಿ ಹೋದರೂ ಅಲ್ಲಿ ತರಬೇತು ಪಡೆದ ಅನೇಕ ಕಲಾವಿದರು ಭಾರತದಲ್ಲಿ ಹೆಸರುಗಳಿಸಿದ್ದಾರೆ. ಮದರಾಸಿನ ಜೆಮಿನಿ ಸ್ಟುಡಿಯೊದಲ್ಲಿ ನಿರ್ಮಿಸಿ, ಉದಯಶಂಕರ 'ಕಲ್ಪನಾ ಎಂಬ ನೃತ್ಯಪ್ರಧಾನವಾದ ಚಲನಚಿತ್ರ ಒಂದು ಅದ್ಭುತ ಕಲ್ಪನೆ. ಬುದ್ಧಚರಿತೆಯಿಂದ ಆಧರಿಸಿದ ಮಹಾತ್ಯಾಗ ಛಾಯಾನಾಟಕ ಒಂದು ಪ್ರಬುದ್ಧ ನೃತ್ಯ ರೂಪಕ. 				

(ಯು.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ